Tuesday, August 19, 2008

ಹೆಸರಿನ ಹಂಗಿಲ್ಲದ ಹನಿಗಳು..

ಸತ್ತು ಸುಧಾರಿಸಿಕೊಳ್ಳುತ್ತಿದ್ದವನ
ಗೋರಿಯ ಮೇಲೆ
ನೀ ಬಂದು ಕೂತಾಗ
ತಲೆಗೆ ಕಲ್ಲು ಬಡಿದಂತಾಗಿ
ಬೆಚ್ಚಿ ಬಿದ್ದು ಎದ್ದು ಕುಳಿತೆ
ಇನ್ನೆಲ್ಲಿಯ ನಿದ್ರೆ!

*~*~*~*

ಕಾಲನ ಕಲ್ಲುಗಳ ಮೇಲೆ ಕೆತ್ತಿದ
ಕವಿತೆ ನಿನ್ನ ನೆನಪುಗಳು;
ಮಾಯಲು ಅವೇನು ಗಾಯಗಳೆ?
ಕೊನರುವುದಿಲ್ಲ, ಕರಗುವುದಿಲ್ಲ
ಬಿರುಗಾಳಿಗೆ ನಲುಗುವುದೂ ಇಲ್ಲ.
ಕೇವಲ ಹಸಿರಾಗುತ್ತವೆ
ಕಣ್ಣೀರ ಮಳೆಗೆ ಪಾಚಿ ಕಟ್ಟಿದಾಗ!

*~*~*~*

ಕತ್ತಲಿನಂತೆ
ಬೆಳಕಿಗೂ
ನೆರಳಿರುವುದಿಲ್ಲ!

Tuesday, August 5, 2008

ಎರಡೆ ಎರಡು ಹನಿಗಳು..

ಉತ್ತರ

ದೀಪಗಳಿರುವುದು
ಉರಿಯಲೆ ಅಥವ ಉರಿಸಲೆ?
ಉತ್ತರ ಹುಡುಕ ಹೋದ
ಎಷ್ಟೋ ಹುಳಗಳು ಕರಕಲಾದವು

*~*~*

ಸಿಗದ ಲೆಕ್ಕ

ಬದುಕಿನ ಗಣಿತದಲ್ಲಿ,ಕೂಡಿದ್ದು ಎಲ್ಲಿ ಉಳಿದೀತು?
ಕಳೆದ ಕ್ಷಣಗಳಂತೂ ನೆನಪಿನ ಖಾತೆಗೆ ಜಮಾ;
ತಾಳೆಯಾದೀತೆಂದು ತಾಳ್ಮೆಯಿಂದ ಕಾದರೂ
ಕೊನೆಗೆ ಉಳಿವುದು ಸಾವೆಂಬ ಸೊನ್ನೆಯೆ!

Sunday, June 29, 2008

ಅಹಲ್ಯೆಯ ಸ್ವಗತ


ಕತ್ತಲ ಬದುಕಿನ
ಸುತ್ತಲೂ ಹಾರುವ
ಬೆಳಕಿನ ಹಕ್ಕಿಗಳು
ಮಾನ ಕಳೆಯುತ್ತವೆ
ಕತ್ತಲಿನಲ್ಲಿ ಎಣ್ಣೆಯನ್ನು
ಸೆಳೆಯುತ್ತಾ ನಗುವ
ದೀಪದ ಕುಡಿಗಳು
ನನ್ನದೆ ಬಟ್ಟೆಯ ಚೂರುಗಳಿಂದ
ನನ್ನೆದೆಯನ್ನು ಸುಡುತ್ತವೆ
ಆಗೆಲ್ಲಾ ವ್ಯರ್ಥವಾಗುತ್ತಿದ್ದ
ಕಣ್ಣೀರಿನ ಹನಿಗಳೆ ಈಗ
ಬೆಂಕಿಯಾರಿಸಿ ಕತ್ತಲಾಗಿಸುತ್ತವೆ
ಕೆಂಡ ಸುಂಯ್ಯ್‍ ಎನ್ನುತ್ತಾ
ಇದ್ದಿಲಾಗುತ್ತದೆ
ನಾನು ಕೂತಲ್ಲೆ
ತಣ್ಣಗಾಗುತ್ತೇನೆ,
ಮಂಜುಗಡ್ಡೆಯ
ಕಲ್ಲಾಗುತ್ತೇನೆ
ಕೊನರುವ ಆಸೆಯೊಂದಿಗೆ
ಕೊರಡಾಗುತ್ತೇನೆ
ಬೆಳಕ ಹರಡುವ ಸೂರ್ಯ
ಸುಡತೊಡಗುತ್ತಾನೆ

{ಬಿನ್ನಹ: ನನ್ನ ಬ್ಲಾಗ್ ಅಪ್ಡೇಟ್ ಆಗದೆ ಬಹಳ ದಿನಗಳು ಎನ್ನುವುದಕ್ಕಿಂತ, ಬಹಳ ತಿಂಗಳುಗಳೆ ಕಳೆದಿದ್ದವು.! ಇದಕ್ಕಾಗಿ ಕಾದು, ನಿರಾಶರಾದ ಎಲ್ಲರಲ್ಲೂ ಕ್ಷಮೆ ಯಾಚಿಸುತ್ತಿದ್ದೇನೆ. ಯಾಕೆ ಬರೆಯಲಿಲ್ಲ, ಎಲ್ಲಿ ಹೋಗಿದ್ದೆ ಈ ಎಲ್ಲವಕ್ಕೂ ಕಾರಣ, ಸಮಜಾಯಿಶಿಗಳು ಇಲ್ಲಿ ಅಪ್ರಸ್ತುತ. ಬರೆಯದೆ ಕೂತಿದ್ದ ನನ್ನನ್ನು ಹಾಗು ನನ್ನ ಮನಸ್ಸಾಕ್ಷಿಯನ್ನು ಪ್ರೇರೇಪಿಸಿ ಮತ್ತೆ ಬರೆಯಲು ಆರಂಭಿಸುವಂತೆ ಮಾಡಿದ ಎಲ್ಲ ಸಹ ಬ್ಲಾಗಿಗಳು ಹಾಗು ಸ್ನೇಹಿತರಿಗೂ ನಾನು ಋಣಿ. ಅಪರಾಧವಂತೂ ಆಗಿದೆ, ಈ ನನ್ನ ತಪ್ಪಿಗೆ ನಿಮ್ಮಲ್ಲಿ ಮತ್ತೊಮ್ಮೆ ಕ್ಷಮೆ ಕೋರುತ್ತಾ ಮತ್ತೆ ಬ್ಲಾಗಿಸುತ್ತಿದ್ದೇನೆ.. ಅಂದ ಹಾಗೆ ನಿಮ್ಮ ಯಾವ ಶಿಕ್ಷೆಗೂ ನಾನು ರೆಡಿ!! ನಿಮ್ಮ ಶಿಕ್ಷೆಯೆ ನನಗೆ ಶ್ರೀರಕ್ಷೆ!!;)}

Friday, November 30, 2007

ಹೆಸರಿಲ್ಲದ ಹನಿಗಳು

ಜಗದಂಗಳದ ಜಂಗುಳಿಯಲ್ಲಿ
ಅವನಿಗಾಗಿ ಹುಡುಕಿದೆ,
ಎಲ್ಲರ ಮುಖದಲ್ಲೂ ಕನ್ನಡಿ;
ಕಂಡದ್ದು ನನ್ನದೆ ಮಸುಕು ಬಿಂಬ

~*~*~*~*~

ನಿದ್ದೆ ಬಾರದ ರಾತ್ರಿಯಲಿ
ಮನದ ಸೂರ ತುಂಬೆಲ್ಲಾ
ಧಗಧಗಿಸುವ ನಿನ್ನ ನೆನಪ
ಮಳೆ ನಕ್ಷತ್ರಗಳು...!

~*~*~*~*~

ನೀನು ಸಿಗಲಿಲ್ಲವೆಂದು
ಬೇಸರಿಸಿದೆ, ದುಃಖಿಸಿದೆ,
ನಿನ್ನ ನೆನಪಲ್ಲೇ ಬದುಕಿದೆ!
ಎಲ್ಲಿಯಾದರೂ ನೀನು ದಕ್ಕಿದ್ದರೆ?
ಖುಶಿಯಿಂದ ಸತ್ತೇ ಹೋಗುತ್ತಿದ್ದೆ!

Wednesday, July 4, 2007

ಒಂದಿಷ್ಟು (ಅಸಂಬದ್ಧ!) ಹನಿಗಳು

ವಿಪರೀತ ಹಸಿವೆಂದು
ಸೂರ್ಯನನ್ನು ನುಂಗಿದೆ,
ತಕ್ಷಣ ಮೂಡಿದ ಚಂದ್ರ
ಕಣ್ಣು ಮಿಟುಕಿಸಿದ!

~*~*~

ಕಳೆದದ್ದು ಸಿಕ್ಕಿತೆಂದು
ಕತ್ತಲಲ್ಲಿ ಕೈ ತಡಕಿದೆ
ಏನೂ ಸಿಗದೆ ಕೈ ತೆಗೆದರೆ
ಕೈಗೆಲ್ಲಾ ಹೊಳೆವ ನಕ್ಷತ್ರಗಳು
ಮೆತ್ತಿಕೊಂಡಿದ್ದವು

~*~*~

ಸಾವನ್ನು ಬೆಂಬತ್ತಿ
ಓಡುತ್ತಿದ್ದ ಅವನು
ಹಿಂದಿನಿಂದ ಬಂದ
ಲಾರಿಯಡಿ ಸಿಕ್ಕಿ
ಅಪ್ಪಚ್ಚಿಯಾಗಿಹೋದ

~*~*~

ನೀನು ನೆನಪಾಗದೆ
ವರುಷಗಳೆ ಸಂದವು
ಆದರೂ ಇನ್ನೂ ನೀನೇಕೆ
ಆಗಾಗ ಬಿಕ್ಕಳಿಸುತ್ತಿರುವೆ..!?

~*~*~

ಕಳೆದ ಕಾಲಗಳ ಪುಸ್ತಕ
ತಿರುವುತ್ತಿದ್ದೆ
ಕೆಲವೆಡೆ ರಕ್ತದಲ್ಲಿ ಬರೆದಿತ್ತು
ಹಲವೆಡೆ ಕಣ್ಣೀರಿಂದ ಅಳಿಸಿ ಹೋಗಿತ್ತು

Tuesday, June 12, 2007

ಗುಲಾಬಿ ಗೊಂಚಲು

{ಎಲ್ಲೋ, ಎಂದೋ ಓದಿದ ಹೀಗೊಂದು ಕಥೆ!
ಸದಾ ನನ್ನನ್ನು ಕಾಡುವ ಕಥೆಗಳಲ್ಲಿ ಈ 'ಗುಲಾಬಿ ಗೊಂಚಲು 'ಸಹ ಒಂದು. ಇದನ್ನು ಬರೆದವರು ಯಾರೂ ಎಂದೂ ಸಹ ನನಗೆ ನೆನಪಿಲ್ಲ! ಯಾರೇ ಆಗಲಿ ಆತ ಅದ್ಭುತ ಕತೆಗಾರನಂತು ಹೌದು. ನಿಜ ಹೇಳಬೇಕೆಂದರೆ, ಇದರ ನಿಜವಾದ ಹೆಸರು 'ಗುಲಾಬಿ ಗೊಂಚಲು' ಹೌದೋ ಅಲ್ಲವೋ ನನಗೆ ನೆನಪಿಲ್ಲ. ಆದರೆ ಈ ಹೆಸರು ಇದಕ್ಕೆ ಸೂಕ್ತವೆನಿಸುವುದರಿಂದ ಹಾಗು ಇದು ಹಾಗೆ ನನ್ನ ಮನಸ್ಸಿನಲ್ಲಿ ಉಳಿದುದರಿಂದ ಅದನ್ನೆ ಶೀರ್ಷಿಕೆಯಾಗಿ ಬಳಸಿಕೊಳ್ಳುತ್ತಿದ್ದೇನೆ. ನಿಮಗೂ ಸಹ ಇಷ್ಟವಾಗಬಹುದು ಎಂದೆನಿಸಿ ನಿಮ್ಮಲ್ಲಿ ಹಂಚಿಕೊಳ್ಳುತಿದ್ದೇನೆ.}


ನಿಧಾನ ಗತಿಯಲ್ಲಿ ಬಸ್ಸು ಸಾಗುತ್ತಿತ್ತು. ಬಸ್ಸಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರವೇ ಇದ್ದರು. ಸರಿ ಸುಮಾರು ಬಸ್ಸಿನ ಎಡ ಮಧ್ಯದಲ್ಲಿ ಆ ತುಂಟ ಕಂಗಳ ಸುಂದರ ಹುಡುಗಿ ಕುಳಿತಿದ್ದಳು. ಅವಳ ಕಣ್ಣೋ ಸುತ್ತೆಲ್ಲಾ ಓಡಾಡುತ್ತಿತ್ತು. ಅವಳಿಗಿಂತ ೪-೫ ಸಾಲು ಮುಂದೆ ಬಲಬದಿಯಲ್ಲಿ ನಡುವಯಸ್ಸಿನ ಆತ ಕುಳಿತಿದ್ದ. ಎಲ್ಲೆಡೆ ಹರಿದಾಡುತ್ತಿದ್ದ ಅವಳ ದೃಷ್ಟಿ ತಟ್ಟನೆ ಅವನ ಕೈಲಿದ್ದ ಸುಂದರ ಗುಲಾಬಿ ಗೊಂಚಲಿನಲ್ಲಿ ನಿಂತತು. ಗುಲಾಬಿ ಎಂದರೆ ಜಗವನ್ನೇ ಮರೆಯುವ ಅವಳಿಗೆ ಅಷ್ಟೊಂದು ಚಂದದ ಗುಲಾಬಿ ಗೊಂಚಲಿನಿಂದ ಕಣ್ಣನ್ನು ಕೀಳಲಾಗಲೆ ಇಲ್ಲ. ಅನ್ಯಮನಸ್ಕನಾಗಿ ಕುಳಿತಿದ್ದ ಆತ ಫಕ್ಕನೆ ಅವಳನ್ನು ಗಮನಿಸಿದ. ಅವಳು ಗುಲಾಬಿಯನ್ನು ಆಸೆಯ ಕಣ್ಣುಗಳಿಂದ ನೋಡುತ್ತಿರುವುದು ಅವನ ಅರಿವಿಗೆ ಬಂತು. ಕ್ಷಣಕಾಲ ತದೇಕ ಚಿತ್ತದಿಂದ ಗೊಂಚಲನ್ನು ನೋಡಿದ. ನಂತರ ಏನೋ ನಿರ್ಧರಿಸದಂತೆ ತನ್ನ ಸೀಟಿನಿಂದೆದ್ದು ಅವಳ ಬಳಿಗೆ ಬಂದು ನಿಂತ. ಬಲಗೈಯಲ್ಲಿದ್ದ ಗೊಂಚಲನ್ನು ಅವಳತ್ತ ಚಾಚಿದ. ಅವಳು ಒಮ್ಮೆಲೆ ಅವಕ್ಕಾದಳು. ಏನು ಮಾಡಬೇಕೆಂದು ತೋಚದೆ ಒಂದರೆ ಕ್ಷಣ ಗಲಿಬಿಲಿಗೊಂಡಳು, ತೆಗೆದು ಕೊಳ್ಳಲೆ ಬೇಡವೆ ಎಂದು ಯೋಚಿಸುತ್ತಿರುವಾಗಲೆ, ಶಾಂತಚಿತ್ತ ಸ್ವರದಲ್ಲಿ ಆತನೆಂದ "ತೆಗೆದುಕೋ ಪರವಾಗಿಲ್ಲ, ನನ್ನ ಹೆಂಡತಿಗೆಂದು ತೆಗೆದು ಕೊಂಡು ಹೋಗುತ್ತಿದ್ದೆ. ಗುಲಾಬಿಯನ್ನು ಬಹಳ ಇಷ್ಟ ಪಡುವ ಹುಡುಗಿಯೊಬ್ಬಳಿಗೆ ಕೊಟ್ಟೆ ಎಂದರೆ ಅವಳೇನು ಬೇಜಾರು ಮಾಡಿ ಕೊಳ್ಳೋದಿಲ್ಲ. ಯೋಚಿಸಬೇಡ ತಗೋ." ಎಂದನು . ಬೇಡವೆಂದರೂ ತನಗರಿವಿಲ್ಲದೆ, ಅವನ ಕೈಯಿಂದ ಹೂ ಗೊಂಚಲನ್ನು ಪಡೆದವಳ ಮುಖದಲ್ಲಿ ಭಯಾಶ್ಚಾರ್ಯಗಳ ಸಂತಸದ ಹೊನಲು! ಕೃತಜ್ಞತೆಯ ಹೊಳಪು ಆಕೆಯ ಕಣ್ಗಳಲ್ಲಿ. ಆತ ಇದೆಲ್ಲದರ ಅರಿವಿಲ್ಲದವನಂತೆ, ತಾನು ಬಂದ ಕೆಲಸವಾಯಿತೆಂದು ನಿರಮ್ಮಳನಾಗಿ ತನ್ನ ಜಾಗಕ್ಕೆ ಹಿಂತಿರುಗಿದ. ಎರಡೂ ಕೈಗಳಲ್ಲಿ ಹೂಗಳನ್ನು ಹಿಡಿದು ಪ್ರಪಂಚದ ಅರಿವಿಲ್ಲದಂತೆ ಧನ್ಯ ಭಾವದಿಂದ ಮೂಕವಾಗಿ ನೋಡುತ್ತಿದ್ದವಳಿಗೆ, ಬಸ್ಸು ನಿಧಾನಗೊಂಡು ಗಕ್ಕನೆ ನಿಂತಾಗ ವಾಸ್ತವದ ಅರಿವಾಯಿತು. ತಲೆ ಎತ್ತಿ ನೋಡಿದಾಗ ಆತ ಇಳಿಯಲು ಅನುವಾಗುತ್ತಿದ್ದುದು ಕಂಡಿತು. "ಛೆ !ಒಂದು ಥ್ಯಾಂಕ್ಸ್ ಸಹ ಹೇಳದೇ ಹೋದೆನಲ್ಲ ನಾನೆಂತವಳು " ಎಂದು ತನ್ನ ಮರೆವಿಗೆ ತಾನೆ ಹಳಿದು ಕೊಳ್ಳುವಾಗಲೆ ಆತ ಇಳಿದಾಗಿತ್ತು. ಆತ ಎಲ್ಲಿ ಹೋಗುತ್ತಾನೆ ಎಂದು ಕುತೂಹಲದಿಂದ ಆಕೆ ಬಸ್ಸಿನ ಕಿಟಕಿ ಯಿಂದ ಕಣ್ಣು ಹಾಯಿಸಿದಳು. ಬಸ್ಸಿನಿಂದಿಳಿದ ಆತ ನಿಧಾನವಾಗಿ ಹತ್ತಿರವೇ ಇದ್ದ ಸ್ಮಶಾನದೆಡೆಗೆ ಹೆಜ್ಜೆ ಹಾಕುತ್ತಿದ್ದ, ತನ್ನ ಹೆಂಡತಿಯ ಸಮಾಧಿಯೆಡೆಗೆ...!

Monday, May 7, 2007

ಸಾಸಿವೆ

ಇದ್ದಕಿದ್ದಂತೆ ಎದೆ ಹಿಡಿದು
ನೆಲಕ್ಕೊರಗಿದರು ತೇಜಸ್ವಿ ,
ಶಾಲೆಯಿಂದ ಹೊರಟ ಕಂದ
ಬಸ್ಸ ಹೊಡತಕ್ಕೆ ಉತ್ತರಿಸದಾಯಿತು,
ಎಲ್ಲವನ್ನೂ ಎತ್ತಿ ಎಸೆಯುವ ನೀನು
ಸಾವಿನ ಎದುರು ತರಗೆಲೆಯಾಗಿರುವೆಯಲ್ಲ!?
ಬುದ್ಧನಿಗೆಂದು ಸಿಕ್ಕೀತು ಒಗ್ಗರಣೆಗೊಂದಿಷ್ಟು
ಸಾಸಿವೆ!!?